Sunday 12 September 2021

ಶ್ರೀಮತಿ ಅಶ್ವಿನಿ ಹೊದಲ ಅವರಿಗೆ ಯಕ್ಷವಾಹಿನಿಯ ಪ್ರೀತ್ಯಾದರದ ವಿದಾಯ

  


ಸೆಪ್ಟೆಂಬರ ೩, ೨೦೨೧


ಯಕ್ಷವಾಹಿನಿಯ ಯೋಜನೆಗಳಲ್ಲಿ ಬಲಭೀಮನಂತೆ  ಅಪೂರ್ವ ಕೆಲಸಗಳನ್ನು ಮಾಡುತ್ತಿದ್ದ ಶ್ರೀಮತಿ ಅಶ್ವಿನಿ ಹೊದಲ ಅವರು ವೈಯಕ್ತಿಕ ಕಾರಣಗಳಿಂದಾಗಿ ಇನ್ನು ಮುಂದೆ ಯಕ್ಷವಾಹಿನಿಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲಾಗದೇ ಇರುವ ಬಗ್ಗೆ ನಮಗೆ ತಿಳಿಸಿದ್ದಾರೆ. ನಮ್ಮೊಂದಿಗೆ ಕೆಲವೇ ವರ್ಷಗಳ ಕೆಲಸ ಮಾಡಿದರೂ ಒಂದು ಜೀವಮಾನದಷ್ಟು ಕೊಡುಗೆಯನ್ನು ಸ್ವಯಂಸೇವೆಯ ಮೂಲಕ ಕೊಟ್ಟ ಅವರನ್ನು ಭಾರ ಹೃದಯದಿಂದ ಈ ಮೂಲಕ ಕೃತಜ್ಞತೆಗಳೊಂದಿಗೆ ಬೀಳ್ಕೊಡುತ್ತಿದ್ದೇವೆ. ಪ್ರಸಂಗಪ್ರತಿಸಂಗ್ರಹ ಹಾಗೂ ಯಕ್ಷಮಟ್ಟುಕೋಶ ಈ ಎರಡು ಯೋಜನೆಗಳ ಕೆಲಸಗಳಲ್ಲಿ ಬೆನ್ನುಲುಬಿನಂತಿದ್ದ ಅವರು ಯಕ್ಷಪ್ರಸಂಗಕೋಶ ಹಾಗೂ ಯಕ್ಷಪ್ರಸಂಗಪಟ್ಟಿ ಯೋಜನೆಗಳಲ್ಲೂ ಅಪಾರವಾದ ಕೊಡುಗೆಗಳನ್ನು ಕೊಟ್ಟಿರುತ್ತಾರೆ. 

ಯಾವುದೇ ಕೆಲಸವನ್ನು ಕೈಗೆತ್ತಿಕೊಂಡರೆ ಅದಕ್ಕೆ ನ್ಯಾಯ ಕೊಡುವತ್ತ ಪೂರ್ಣ ಸಮರ್ಪಿಸಿಕೊಳ್ಳುವ ಅಶ್ವಿನಿ ಹೊದಲ ಅವರು ಅರೆಬರೆಯಾಗಿ ಕೆಲಸ ಮಾಡುವ ಸಾಧ್ಯತೆಗಳಿಂದ ದೂರ ಇರುವ ಜಾಯಮಾನದವರು, ಆ ಕಾರಣಕ್ಕಾಗಿಯೇ ಪೂರ್ಣ ಪ್ರಮಾಣದಲ್ಲಿ ಸ್ವಯಂಸೇವೆಯ ಕ್ರಿಯಾಶೀಲತೆಯಿಂದ ದೂರವಿರುವ ಅಪೇಕ್ಷೆಯನ್ನು ವ್ಯಕ್ತಪಡಿಸಿದ್ದಾರೆ. ಅವರ ಅಪಾರ ಕೊಡುಗೆಯನ್ನು ಗಮನಿಸಿ, ಅವರನ್ನು ಇತ್ತೀಚೆಗೆ ನಾವು ಆಡಳಿತಮಂಡಳಿಯಲ್ಲಿ ಸೇರಿಸಿಕೊಂಡಿದ್ದು, ಅವರನ್ನು ಇನ್ನೊಬ್ಬ ವಿಶ್ವಸ್ತರನ್ನಾಗಿ ಛಾಪಿಸುವ ನಮ್ಮ ಯೋಚನೆಗಳಿಗೆ  ಈ ಮೂಲಕ ತಡೆಯಾಗಿದೆ.

 ಯಕ್ಷವಾಹಿನಿಗೆ ಎಲ್ಲರ ಸಹಯೋಗ ಹಾಗೂ ಸಹಕಾರ ಬಯಸುವ ನಾವು ಮುಂದೆ ಅವರಿಂದ ಸಾಧ್ಯವಾಗಬಲ್ಲ ಎಲ್ಲಾ ಸಹಕಾರ, ಸಹಯೋಗಗಳಿಗೆ ಆಶಿಸುತ್ತೇವೆ. ಮುಂದೆ ಯಕ್ಷವಾಹಿನಿಯ ಆಧಾರ ಸ್ಥಂಭಗಳಲ್ಲೊಂದಾಗಿ ಅವರು ವಾಪಾಸಾಗುವ ಸಾಧ್ಯತೆಗಳೂ ಮೂಡಿ ಬರಲಿ ಎಂದು ಹಾರೈಸುತ್ತೇವೆ.

 ಕಳೆದ ಆರು ತಿಂಗಳಲ್ಲಿ ವೃತ್ತಿ ಜೀವನದಲ್ಲಿ ಅಪೂರ್ವ ಯಶಸ್ಸನ್ನು ಕಾಣುತ್ತಾ ಅವಿಶ್ರಾಂತವಾಗಿ ಯಾವತ್ತೂ ದುಡಿಯುವ ಅಶ್ವಿನಿ ಹೊದಲ ಅವರಿಗೆ ವೈಯಕ್ತಿಕ ಬದುಕಿನಲ್ಲಿ ಯಶಸ್ಸು ಹಾಗೂ ಸಾರ್ಥಕ್ಯವನ್ನು ಹಾರೈಸುವುದಲ್ಲದೇ ಅವರ ಕುಟುಂಬದವರಿಗೂ ಶುಭ ಹಾರೈಸುತ್ತಿದ್ದೇವೆ.

 ಅಶ್ವಿನಿ ಹೊದಲ ಅವರ ನಿರ್ಗಮನವು ಅವರನ್ನು ನಂಬಿಕೊಂಡು ಬಂದಿರುವ ಯೋಜನೆಗಳಿಗೆ ತಾತ್ಕಾಲಿಕ ಹಿನ್ನಡೆ ಕೊಟ್ಟರೂ, ಅವರ ಸ್ಥಾನ ತುಂಬಿಸುವತ್ತ ಅನೇಕ ಹೊಸ ಹಾಗೂ ಹಾಲಿ ಸ್ವಯಂಸೇವಕರು ನಮ್ಮ ಕೈಜೋಡಿಸಲಿ ಎಂದು ಹಾರೈಸುತ್ತೇವೆ. ಪ್ರಸಂಗಪ್ರತಿಸಂಗ್ರಹದ ಸಂಚಾಲಕತ್ವದ ಭಾರವನ್ನು  ವಹಿಸಿಕೊಳ್ಳಲು ಲ. ನಾ. ಭಟ್ಮುಂದೆ ಬಂದಿದ್ದಾರೆ. ಯಕ್ಷಮಟ್ಟುಕೋಶ ಯೋಜನೆಯಲ್ಲಿ ಅವರಿಲ್ಲದ ನಷ್ಟವನ್ನು ಭರಿಸುವ ಜವಾಬ್ದಾರಿ  ಸಂಚಾಲಕರಾದ ಅಜಿತ ಕಾರಂತರದ್ದಾದರೆ, ಯಕ್ಷಪ್ರಸಂಗಕೋಶ ಯೋಜನೆಯಲ್ಲಿ ರವಿ ಮಡೋಡಿಯವರದ್ದೂ, ಯಕ್ಷಪ್ರಸಂಗಪಟ್ಟಿ ಯೋಜನೆಯಲ್ಲಿ ನಟರಾಜ ಉಪಾಧ್ಯರದ್ದೂ ಆಗಿರುತ್ತದೆ.

 ಯಕ್ಷಗಾನವೇ ವಿಶ್ವಕಲೆಯಾಗಿ ಒಂದು ವಾಹಿನಿಯಾದರೆ, ಅದರಲ್ಲಿ ಅಳಿಲು ಸೇವೆಯಾಗಿ ತೊಡಗಿಕೊಂಡಿರುವ ಯಕ್ಷವಾಹಿನಿಯೂ ಒಂದು ನದಿಯೇ. ಇದರ ಹರಿವಿನಲ್ಲಿ ಸ್ವಯಂಸೇವಕರ ಕೊಡುಗೆಗಳು ವಾಹಿನಿಯಾಗಿ ಬರುತ್ತದೆ, ಹೋಗುತ್ತದೆ.  ಅಶ್ವಿನಿ ಹೊದಲರನ್ನು ಮೀರಿಸುವ ಸ್ವಯಂಸೇವಕರು ಮುಂದೆ ಮೂಡಿಬರುವತ್ತ ನಮ್ಮ ವಿಶ್ವಾಸವಿಲ್ಲದಿದ್ದರೂ, ಹಾಗೆಯೇ ಆಗಲಿ  ಎಂದು ನಾವು ವಿಧಿಯನ್ನು ಪ್ರಾರ್ಥಿಸುತ್ತ, ಅಂತಹ ಅನುಗ್ರಹಗಳ ಮೂಲಕವೇ  ಯಕ್ಷವಾಹಿನಿಯು ಒಂದು ಮಿತಿಯಲ್ಲಿದ್ದರೂ ತನ್ನ ಪ್ರಾಮಾಣಿಕ ಪ್ರಯತ್ನಗಳನ್ನು ಎಂದಿನಂತೆ ಮುಂದುವರೆಸುವದಲ್ಲದೇ ಇನ್ನೂ ಹೆಚ್ಚಿಸುತ್ತಾ ಹೋಗಲಿ ಎಂದು ಬೇಡಿಕೊಳ್ಳುತ್ತೇವೆ.


ಮತ್ತೊಮ್ಮೆ ಶ್ರೀಮತಿ ಅಶ್ವಿನಿ ಹೊದಲ ಅವರಿಗೆ ಕೃತಜ್ಣತೆಗಳನ್ನು ತಿಳಿಸುವ ಹಾಗೂ ಅವರಿಗೆ ಶುಭ ಹಾರೈಸುವ,

 

ಆಡಳಿತ ಮಂಡಳಿ ಸದಸ್ಯರೆಲ್ಲರು,

ಯಕ್ಷವಾಹಿನಿ, ಬೆಂಗಳೂರು

No comments:

Post a Comment