Sunday 8 August 2021

ಡಾ. ಆನಂದರಾಮ ಉಪಾಧ್ಯರ “ಯಕ್ಷಪಥ” ಪುಸ್ತಕದ ಉಚಿತ ಪ್ರಸಾರಕ್ಕಾಗಿ ಅಂತರಜಾಲ ಪ್ರತಿಯೂ ಯಕ್ಷವಾಹಿನಿಯ ಮೂಲಕ ಇಂದೇ ಲೋಕಾರ್ಪಣೆ; ಈ ಮೂಲಕ “ಯಕ್ಷಪುಸ್ತಕಕೋಶ” ಎಂಬ ಹೊಸ ಯೋಜನೆಗೆ ಚಾಲನೆ!



ಆಗಸ್ಟ್೦೮, ೨೦೨೧

ಡಾ. ಆನಂದರಾಮ ಉಪಾಧ್ಯರ ಸಂಪಾದಕತ್ವದ, ಬೆಂಗಳೂರಿನ ಯಕ್ಷಗಾನದ ಹೆಜ್ಜೆಗುರುತುಗಳ ಸುತ್ತಲಿನ ಯಕ್ಷಪಥಎಂಬ ಅಪೂರ್ವ ಪುಸ್ತಕವು ಇಂದು ಲೋಕಾರ್ಪಣೆಯಾಗುತ್ತಿರುವಾಗಲೇ, ಅದರ ಅಂತರಜಾಲ ಪ್ರತಿಯನ್ನು ಕೂಡಾ  ಇಂದೇ ಲೋಕಾರ್ಪಣೆ ಮಾಡುತ್ತಿರುವುದು ಒಂದು ವಿಶಿಷ್ಟ ಸಂಗತಿ. ಭೌತಿಕರೂಪದ ಪುಸ್ತಕದ ಜೊತೆಜೊತೆಗೇ ಪಿಡಿಎಫ್ರೂಪದ ಪುಸ್ತಕವನ್ನೂ ಅಂತರಜಾಲದ ಮೂಲಕ ಉಚಿತ ಹಂಚುವಿಕೆಗಾಗಿ ಸಮಾನಾಂತರವಾಗಿ ಲೋಕಾರ್ಪಣೆ ಮಾಡುವ ಈ ಹೊಸ ಸಂಪ್ರದಾಯದ ಹಿಂದಿನ ಉದಾರತೆ, ಕ್ರಿಯಾಶೀಲತೆ, ಕ್ರಾಂತಿಕಾರೀ ಮನೋಭಾವ ಮತ್ತು ಇದರಿಂದ ಕನ್ನಡ ಹಾಗೂ ಯಕ್ಷಗಾನ ಸಾರಸ್ವತ ಲೋಕದಲ್ಲಿ ಉದ್ಭವಿಸುವ ಹೊಸ ಸ್ಫೂರ್ತಿಯು ಅಪಾರ. ಈ ಕುರಿತಾಗಿ ಡಾ. ಆನಂದರಾಮ ಉಪಾಧ್ಯರು ಹಾಗೂ ಅವರಿಗೆ ಸಹಕರಿಸುತ್ತಿರುವ ಭರತ್ಪಬ್ಲಿಕೇಶನ್‌  ಎಂಬ ಪ್ರಕಾಶಕರು ಈರ್ವರಿಗೂ ನಮ್ಮ ಅಭಿನಂದನೆಗಳು.

 

ಯಕ್ಷವಾಹಿನಿ ಸಂಸ್ಥೆಯ ಸ್ಥಾಪಕ ವಿಶ್ವಸ್ಥರು ಹಾಗೂ ಮೊದಲ ಕಾರ್ಯಾಧ್ಯಕ್ಷರೂ ಆಗಿರುವ ಆನಂದರಾಮ ಉಪಾಧ್ಯರು, ಈ ಅಂತರಜಾಲದ ಪ್ರತಿಯ ಉಚಿತ ಹಂಚುವಿಕೆಯ ಜವಾಬ್ದಾರಿಯನ್ನು ಯಕ್ಷವಾಹಿನಿ ಸಂಸ್ಥೆಗೆ ಒಪ್ಪಿಸಿರುವುದು ಅರ್ಥವತ್ತಾಗಿದೆ. “ಯಕ್ಷಗಾನಕ್ಕಾಗಿ ತನ್ನಿಂದ ಏನು?” ಎಂಬ ಪ್ರಶ್ನೆಯ ಸುತ್ತ ಮುಡಿಪಾಗಿ ತೊಡಗಿಕೊಂಡಿರುವ ಸ್ವಯಂಸೇವಕರ ಮುಡಿಪಿನ ಕೆಲಸಗಳಿಂದ ಸಾಧ್ಯವಾಗಿರುವ,  ಅಂತರಜಾಲದ ಮೂಲಕ ಉಚಿತ ಹಂಚುವಿಕೆಯ ಅನೇಕ ದಾಖಲಾತಿಯ ಯೋಜನೆಗಳ ಮಧ್ಯೆ, ಅವರೆಲ್ಲರಿಗೆ ನಾಯಕರೊಲ್ಲಬ್ಬರಾಗಿರುವ ಡಾ. ಆನಂದರಾಮ ಉಪಾಧ್ಯರು ಯಕ್ಷವಾಹಿನಿ ಸಂಸ್ಥೆ ಹಾಗೂ ಸಮೂಹದ ಮುಖ್ಯ ಚೇತನದ ಮುಖವಾಣಿಯಾಗಿ ಈ ಉದಾರತೆಯ ಮೂಲಕ ಇನ್ನಷ್ಟು ಬೆಳಗುತ್ತಿದ್ದಾರೆ.

 ಯಕ್ಷವಾಹಿನಿಯ ಸಹಯೋಗದ ಮೂಲಕ ಲೋಕಾರ್ಪಣಗೊಳ್ಳುತ್ತಿರುವ ಯಕ್ಷಪಥಪುಸ್ತಕವನ್ನು ಓದಲು ಮತ್ತು ಕೆಳಗಿಳಿಸಿಕೊಳ್ಳಲು ಈ ಕೆಳಗಿನ ಕೊಂಡಿಯನ್ನು ಒತ್ತಿ:

https://drive.google.com/file/d/1sQgmTA2mPjuM00oAO5zP7QFEoSKneJBF/view?usp=sharing

 ಸ್ವಯಂಸೇವಕರ ಬಲ ಹೆಚ್ಚಿದಂತೆ ಹೆಚ್ಚಿನ ಯೋಜನೆಗಳನ್ನೂ ಹಾಗೂ ಹಾಲಿ ಯೋಜನೆಗಳ ಆಳ ವಿಸ್ತಾರಗಳನ್ನು ಸದಾ ವಿಸ್ತರಿಸುವ ಕುರಿತು ಯಕ್ಷವಾಹಿನಿಯ ನಾಯಕತ್ವವು ಸದಾ ಹಪಹಪಿಸುತ್ತಿದೆ. ಉಚಿತ ಪ್ರಸಾರಕ್ಕೆ ಸಿಗುವ ಎಲ್ಲಾ ಪ್ರಸಂಗಪ್ರತಿಗಳನ್ನು ಕ್ರೋಢಿಸುತ್ತಾ ಹೋಗುವ ಪ್ರಸಂಗಪ್ರತಿಸಂಗ್ರಹಎಂಬ ನಮ್ಮ ಯೋಜನೆಯು ಸಾಕಷ್ಟು ಯಶಸ್ಸನ್ನು ಕಂಡಿರುವುದರಿಂದ, ಅದೇ ರೀತಿಯಲ್ಲಿ ಪ್ರಸಂಗೇತರ ಇತರ ಯಕ್ಷಗಾನ ಪುಸ್ತಕಗಳ ಉಚಿತ ಪ್ರಸಾರಕ್ಕಾಗಿಯೇ ಯಕ್ಷಪುಸ್ತಕಕೋಶಎಂಬ ಹೊಸ ಯೋಜನೆಯ ಅನಾವರಣಕ್ಕಾಗಿ ನಮ್ಮ ತುಡಿತವಿದ್ದರೂ ಯೋಗ್ಯ ಸ್ವಯಂಸೇವಕರ ನಾಯಕತ್ವ ಮತ್ತು ಮುಡಿಪಿನ ಕೆಲಸದ ಕೊರತೆಯಲ್ಲಿ ಈ ಯೋಜನೆಯ ಚಾಲನೆಯನ್ನು ಮುಂದೂಡುತ್ತಲೇ ಬಂದಿರುತ್ತೇವೆ. ಆದರೆ, ಡಾ. ಉಪಾಧ್ಯರ ಈ ಹೆಜ್ಜೆ ನಮ್ಮನ್ನು ಸ್ಫೂರ್ತಿಯಿಂದ ಬಡಿದೆಬ್ಬಿಸಿದೆ. ಹಾಗಾಗಿ, ಯಾವುದೇ ಸಿದ್ದತೆಯ ಮೊದಲೇ ಯಕ್ಷಪುಸ್ತಕಕೋಶಯೋಜನೆಯ ಚಾಲನೆಗೆ  ಇಂದೇ ಅನುವು ಕೊಟ್ಟು, ಹೆಚ್ಚಿನ ಸ್ವಯಂಸೇವಕರ ಸಹಕಾರ ಸಿಗುವ ತನಕ ಈ ಹೊಸ ಯೋಜನೆಯನ್ನು ನಿಧಾನಗತಿಯಲ್ಲಿ ಸಾಗಿಸುವ ಬದ್ಧತೆಗೆ ಒಳಪಡುತ್ತಿದ್ದೇವೆ.

 

ಯಕ್ಷಪುಸ್ತಕಕೋಶ ಎಂಬ ಯೋಜನೆಯ ಚಾಲನೆಯ ಸಂಕೇತವಾಗಿ ಕೋಶಕೋಷ್ಟಕದ ಮಾದರಿಯನ್ನು ಗಮನಿಸಲು ಈ ಕೆಳಗಿನ ಕೊಂಡಿಯನ್ನು ಒತ್ತಿ:

https://drive.google.com/file/d/1z8eh0irQ4j7wdo2xSinj85pjyDnnc10X/view?usp=sharing

 ಈ ಯೋಜನೆಯು ಚಾಲನೆಗೆ ಬರುವ ಮುನ್ನವೇ ನಮ್ಮ ಯಕ್ಷವಾಹಿನಿ ಸಮೂಹದ  ಕೆ. ಉಮೇಶ ಆಚಾರ್ಯ ಗೇರುಕಟ್ಟೆ ಇವರ “ಯಕ್ಷಗಾನ ಆಚಾರ್ಯ ಅರ್ಕುಳ ಸುಬ್ರಾಯ ಆಚಾರ್ಯ” ಎಂಬ ಪುಸ್ತಕದ ಅಂತರಜಾಲ ಪ್ರತಿಯು ನಮ್ಮನ್ನು ಈಗಾಗಲೇ ಸೇರಿದ್ದು, ಆ ಪುಸ್ತಕದ ಕೊಂಡಿಯನ್ನೂ ಕೋಷ್ಟಕದಲ್ಲಿ ನೀವು ಗಮನಿಸಬಹುದಾಗಿದೆ!

 ಯಕ್ಷವಾಹಿನಿಯ ಕಾರ್ಯಾಧ್ಯಕ್ಷ ಪದವಿಯನ್ನು ಯುವ ನಾಯಕರಾದ ರವಿ ಮಡೋಡಿ ಅವರ ಹೆಗಲಿಗೇರಿಸಿ, ಸಂಸ್ಥೆಯ ಏಳಿಗೆಯ ರಾಯಭಾರಿಯಾಗಿ ದುಡಿಯಲು ಹೊರಟಿರುವ ಡಾ. ಆನಂದರಾಮ ಉಪಾಧ್ಯರು ತನ್ನ ಇತಿಮಿತಿಗಳ ನಡುವೆ ಈ ರೀತಿಯ ಅಭೂತಪೂರ್ವ ಚೇತನವನ್ನು ಹುಟ್ಟಿಸುವ ಪ್ರಯತ್ನಗಳ ಮೂಲಕ ಯಕ್ಷವಾಹಿನಿಯು ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರಬುದ್ಧ ಸಂಸ್ಥೆ ಹಾಗೂ ಸಮೂಹವಾಗಿ ಬೆಳೆಯುವತ್ತ ತಮ್ಮ ನಾಯಕತ್ವದ ಒಂದು ಝಲಕ್ ಅನ್ನು ಈ ರೀತಿಯಾಗಿ ತೋರಿಸಿ ನಮ್ಮೆಲ್ಲರನ್ನೂ ಮೆಚ್ಚಿಸಿದ್ದಾರೆ.

 

ಈ ಶುಭ ಸಂದರ್ಭದಲ್ಲಿ ನಾವು ಪ್ರಾರ್ಥಿಸುವುದಿಷ್ಟೇ: ಡಾ. ಆನಂದರಾಮ ಉಪಾಧ್ಯರಿಟ್ಟ ಹೆಜ್ಜೆಯ ದಾರಿಯಲ್ಲಿಯೇ, ಎಲ್ಲಾ ಕನ್ನಡದ ಹಾಗೂ ಯಕ್ಷಗಾನದ ಲೇಖಕರುಗಳು ಹಾಗೂ ಪ್ರಕಾಶಕರುಗಳು ಅಂತರಜಾಲದ ಪ್ರತಿಗಳನ್ನು ಕೂಡಾ ಸಮಾನಾಂತರವಾಗಿ ಬಿಡುಗೊಡೆಗೊಳಿಸುವ ಉದ್ಯಮಶೀಲತೆಗೆ ಬದ್ಧರಾಗಲಿ. ಹಣಕಾಸಿನ ಮಿತಿಯನ್ನು ಮೀರಿ, ಕ್ರಿಯಾಶೀಲತೆ ಹಾಗೂ ಸೃಜನಶೀಲತೆಯ ಮೂಲ ಕಾರಣಗಳಿಗಾಗಿ  ಪುಸ್ತಕಗಳನ್ನು ಬರೆಯುವ /  ಪ್ರಕಾಶಿಸುವ ಎಲ್ಲಾ ಲೇಖಕರು / ಪ್ರಕಾಶಕರುಗಳು ಉಚಿತ ಪ್ರಸಾರಕ್ಕಾಗಿ ಅಂತರಜಾಲ ಪ್ರತಿಗಳನ್ನು ಕೊಡ ಮಾಡುತ್ತಾ ಹೋಗಲಿ, ಅಂತಹ ಪ್ರತಿಗಳ ದಾಖಲಾತಿ ಹಾಗೂ ಉಚಿತ ಪ್ರಸಾರದ ಸುತ್ತ ನಮ್ಮ ಸಂಸ್ಥೆ / ಸಮೂಹವು ಸದಾ ಮುಡಿಪಾಗಿದೆ. ಈ ಮುಡಿಪಿನ ಸುತ್ತ ಹೆಚ್ಚಿನ ಸಾಧನೆಯ ಸಾಕಾರಕ್ಕಾಗಿ ಇನ್ನೂ ಹೆಚ್ಚಿನ ಸ್ವಯಂಸೇವಕರ ಸಹಾಯ ಸಹಕಾರಗಳನ್ನು ಈ ಮೂಲಕ ಕೋರುತ್ತಿದ್ದೇವೆ.  ಸ್ವಯಂಸೇವೆಯ ಸಾಧ್ಯತೆ ಇಲ್ಲದವರು ನಮ್ಮ ಸಂಸ್ಥೆ ಹಾಗೂ ಯೋಜನೆಗಳನ್ನು ಬಲ ಪಡಿಸುವತ್ತ ಹಣಕಾಸಿನ ಸಹಾಯ ಮಾಡುವವರಿದ್ದರೆ ಅದನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಿ ಹಣಕಾಸಿನ ಸಂಪನ್ಮೂಲದ ಬಲದಲ್ಲಿ ಹೆಚ್ಚಿನ ಕ್ರಿಯಾಶೀಲತೆಯತ್ತ ತೊಡಗಿಕೊಳ್ಳಲು ಸಿದ್ಧರಿದ್ದೇವೆ.

ಈ ಸಂದರ್ಭದಲ್ಲಿ ಪ್ರಸಂಗಪ್ರತಿಸಂಗ್ರಹ ಹಾಗೂ ಯಕ್ಷಪ್ರಸಂಗಕೋಶ ಯೋಜನೆಗಳ ಸುತ್ತ ಯಕ್ಷಗಾನ ಪ್ರಸಂಗ ಪುಸ್ತಕಗಳ ಅಂತರಜಾಲ ಪ್ರತಿಗಳನ್ನು ಹುಟ್ಟಿಸಲು ಉದಾರತೆಯಿಂದ ಅನುಮತಿ ಕೊಟ್ಟ ನೂರಾರು ಪ್ರಸಂಗಕವಿಗಳಿಗೆ ಹಾಗೂ ಸಂಬಂಧಿತ ಪ್ರಕಾಶಕರಿಗೆ ನಮ್ಮ ನಮನಗಳು. ಇವರೆಲ್ಲರ ಈವರೆಗಿನ ಉದಾರತೆಯೇ ಡಾ. ಆನಂದರಾಮ ಉಪಾಧ್ಯರ ಪ್ರಸಂಗೇತರ ಪುಸ್ತಕಕ್ಕೂ ಈ ರೀತಿಯ ಅನುಮತಿ ಕೊಡುವತ್ತ ಮಾರ್ಗದರ್ಶಕವಾಗಿದೆ ಎಂದು ಹೇಳಿದರೆ ತಪ್ಪಾಗಲಾರದು!

 

 

ಯಕ್ಷವಾಹಿನಿಯಿಂದ “ಯಕ್ಷಪುಸ್ತಕಕೋಶ” ಯೋಜನೆಯ ಚಾಲನೆಗೆ ಅವಕಾಶ ಕೊಟ್ಟ ಇಂದಿನ ಕಾರ್ಯಕ್ರಮದ ರೂವಾರಿಗಳಾದ “ಸಾಹಿತ್ಯ ವಿಚಾರ ವೇದಿಕೆ”, ಗಿರಿನಗರ ಸಮೂಹಕ್ಕೆ ಕೃತಜ್ಞತೆಗಳು!

 ಈ ಅಪೂರ್ವ ಸಂದರ್ಭದಲ್ಲಿ ಡಾ. ಆನಂದರಾಮ ಉಪಾಧ್ಯರು ಹಾಗೂ ಅವರ ಕುಟುಂಬದವರಿಗೆ ಹೆಚ್ಚಿನ ಆಯುಷ್ಯ, ಆರೋಗ್ಯ ಹಾಗೂ ಯಶಸ್ಸನ್ನು ಕೋರುವ,

 - ಯಕ್ಷವಾಹಿನಿ ಆಡಳಿತ ಮಂಡಳಿ







No comments:

Post a Comment